ಬೆಂಗಳೂರು, ಅಕ್ಟೋಬರ್ 21: ಆತ ಬೋರೆವೆಲ್ ಉದ್ಯಮಿ . ತನ್ನದೆ ಆದ ಬೋರೆವೆಲ್ ನಡೆಸಿಕೊಂಡು ಹೋಗುತ್ತಿದ್ದವನಿಗೆ ಅದೊಂದು ಮಹಾದಾಸೆ ಇತ್ತು. ಈ ವೇಳೆ ಪರಿಚಯವಾದ ಕೆಲ ಖತರ್ನಾಕ್ಗಳು ರೈಸ್ ಪುಲ್ಲಿಂಗ್ ಜಾದು ತೋರಿಸಿ ಜಮೀನು ಬರೆಸಿಕೊಂಡಿದ್ದರು. ಆದರೆ ಖಾಕಿ ಪಡೆ ಖತರ್ನಾಕ್ಗಳ ಹೆಡೆಮುರಿ ಕಟ್ಟಿದೆ. ಆ ಕುರಿತ ಒಂದು ವರದಿ ಇಲ್ಲಿದೆ. ಮುಂದೆ ಓದಿ.
ಐವರು ಆರೋಪಿಗಳ ಬಂಧನ
ಮೋಸ ಮಾಡುವ ಜನ ಇರುವ ತನಕ ಮೋಸ ಹೋಗುವವರು ಇರ್ತಾರೆ. ಬೆಂಗಳೂರಂತ ಸಿಟಿಯಲ್ಲಿ ಇಂತ ಮೋಸಗಾರರ ಬಗ್ಗೆ ಎಚ್ಚರಿಕೆಯಿಂದ ಇರೋದು ಬಹಳ ಕಷ್ಟವಾಗಿದೆ. ಇಲ್ಲೊಬ್ಬ ಉದ್ಯಮಿ ಖದೀಮರ ಮಾತು ನಂಬಿ ಬರೋಬ್ಬರಿ 6.58 ಎಕರೆ ಜಮೀನು ಕಳೆದುಕೊಂಡಿದ್ದಾರೆ. ಆದರೆ ಸಿಸಿಬಿ ಪೊಲೀಸರು ಮೋಸ ಮಾಡಿದ್ದ ಐವರು ಆರೋಪಿಗಳಾದ ನಾಗರತ್ನ, ರಾಮಚಂದ್ರ, ಸುಕುಮಾರ್ ನಟೇಶ್ ಮತ್ತು ಮಂಜುನಾಥ್ರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ ಎರಡು ರೈಸ್ ಪುಲ್ಲಿಂಗ್ ವಸ್ತು, 7 ಮೊಬೈಲ್ ಸೀಜ್ ಮಾಡಲಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಐವರು ಆರೋಪಿಗಳೇ ಉದ್ಯಮಿಯೊಬ್ಬರಿಗೆ ರೈಸ್ ಪುಲ್ಲಿಂಗ್ ವಸ್ತು ತೋರಿಸಿ 6.58 ಎಕರೆ ಜಮೀನು ಬರೆಸಿಕೊಂಡಿದ್ದರು. ಅಷ್ಟಕ್ಕೂ ಆಗಿದ್ದೇನಂದ್ರೆ ಬೋರ್ ವೆಲ್ ಉದ್ಯಮಿಯಾಗಿರುವ ಕಾಂತರಾಜು ಅಂಡರ್ ವಾಟರ್ ಹಾಗೂ ಕ್ರೂಡಾಯಿಲ್ ಪತ್ತೆ ಹಚ್ಚುವುದರಲ್ಲಿ ಎತ್ತಿದ ಕೈ. ಆದರೆ ಕಾಂತರಾಜ್ಗೆ ಸ್ವಂತದೊಂದು ಕ್ರೂಡ್ ಆಯಿಲ್ ಹಾಗೂ ರಿಪೈನರಿ ಪ್ಲಾಂಟ್ ತೆರೆಯಬೇಕೆಂಬ ಆಸೆಯಿತ್ತು. ಇದರ ಪರವಾನಗಿಗಾಗಿ ಓಡಾಡುತ್ತಿದ್ದ ಕಾಂತರಾಜುಗೆ ನಾಲ್ವರು ಆರೋಪಿಗಳು ಪರಿಚಯರಾಗಿದ್ದರು. ಮುಂದೆ ಈ ಪರಿಚಯ ವಂಚನೆಗೆ ದಾರಿಯಾಗಿತ್ತು.
ಆರೋಪಿಗಳ ಪೈಕಿ ನಾಗರತ್ನ ನನ್ನದು ಪೆಟ್ರೋಲ್ ಬಂಕ್ ಇದ್ದು ನಿಮಗೆ ಪ್ಲಾಂಟ್ ತೆರೆಯಲು ಅನುಮತಿ ಕೊಡಿಸುತ್ತೇನೆ. ಹಣವನ್ನೂ ನಾವೇ ಕೊಡಿಸ್ತಿವಿ, ಆದರೆ ನಮ್ಮ ಬಳಿ ರೈಸ್ ಪುಲ್ಲಿಂಗ್ ಚೊಂಬುಗಳಿದ್ದು ಅದು ಸ್ಯಾಟಲೈಟ್ ನೊಂದಿಗೆ ಸಂಪರ್ಕ ಹೊಂದುತ್ತವೆ. ಆ ರೈಸ್ ಪುಲ್ಲಿಂಗ್ ಚೊಂಬುಗಳು ಆಲ್ಪಾ, ಬೀಟಾ, ಗಾಮಾ ರೇಖೆಗಳೊಂದಿಗೆ ಸಂಪರ್ಕ ಹೊಂದುತ್ತವೆ ಎಂದು ನಂಬಿಸಿದ್ದರು.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ಗಳಿಗೆ ಕರೆಸಿ ಬಾಡಿಗಾರ್ಡ್ ಗಳನ್ನ ಸೆಟಪ್ ಮಾಡಿ ಬಿಲ್ಡಪ್ ಕೊಟ್ಟು ಪರೀಕ್ಷೆ ಮಾಡಿ ನಂಬಿಸಿದ್ದರು. ರೈಸ್ ಪುಲ್ಲಿಂಗ್ ಚೆಂಬುಗಳನ್ನ ಮಾರಿದರೆ 5 ಲಕ್ಷ ಕೋಟಿ ರೂ. ಬರುತ್ತೆ ಅದನ್ನ ಮಾರಿದ ದುಡ್ಡಲ್ಲಿ ನಿಮಗೆ ಪ್ಲಾಂಟ್ ಜೊತೆಗೆ ಅನುಮತಿ ಕೊಡಿಸುತ್ತೇವೆ ಎಂದಿದ್ದರು. ಇದನ್ನ ನಂಬಿ ಕಾಂತರಾಜು ನೆಲಮಂಗಲದಲ್ಲಿರುವ 2 ಎಕರೆ 4 ಗುಂಟೆ ಜಮೀನು, ಥಣೀಸಂದ್ರದ 30X40 ಸೈಟ್, ಕನಕಪುರದ 4.18 ಎಕರೆ ಜಮೀನು ಬರೆದುಕೊಟ್ಟಿದ್ದರು. ಆದರೆ ವರ್ಷಾನುಗಟ್ಟಲೆ ಕಳೆದರು ಜಮೀನು ವಾಪಸ್ ಕೊಡದೇ ಅನುಮತಿಯೂ ಕೊಡಿಸದೆ ಸತಾಯಿಸಿದ್ದರು. ನಂತರ ವಂಚನೆ ಬಗ್ಗೆ ಸಿಸಿಬಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
Discover more from ಕರುನಾಡು ಫೈನಾನ್ಸ್
Subscribe to get the latest posts sent to your email.